'ಕಳವರದುರ್ಗ' ಎಂಬ ಹೆಸರಿನಿಂದಲೂ ಕರೆಯಲ್ಪಡುವ ಸ್ಕಂದಗಿರಿಯು ಕೋಟೆಯಿಂದಾವೃತ್ತವಾದ ಬೆಟ್ಟವಾಗಿದ್ದು, ಬೆಂಗಳೂರಿನಿಂದ ಸು. 62 ಕಿ.ಮೀ. ದೂರದಲ್ಲಿರುವ ಕಳವರ ಹಳ್ಲಿಯಲ್ಲಿದೆ. ಇದು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಳ್ಳಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 7 ರ ಬಳಿ ಕಂಡುಬರುತ್ತದೆ. ಬೆಟ್ಟದ ತುಡಿಯು ಸಮುದ್ರ ಮಟ್ಟದಿಂದ 1450 ಮೀ. ನಷ್ಟು ಎತ್ತರದಲ್ಲಿದೆ. ಹಾಗೂ ಇದು ಕಳವರ ಎಂಬ ಗ್ರಾಮಕ್ಕೆ ಹೊಂದಿಕೊಂಡಿದೆ. ಈ ಹಳ್ಳಿಯು 2011ರ ಜನಗಣತಿ ಪ್ರಕಾರ 1093 ಜನಸಂಖ್ಯೆ ಹೊಂದಿದೆ. ೧೭೯೧ರಲ್ಲಿ ಟಿಪ್ಪು ಬ್ರಿಟಿಷರಿಂದ ಸೋತಾಗ, ಈ ಕೋಟೆಯೂ ಆಂಗ್ಲರ ಪಾಲಾಯಿತು. == ಚಾರಣ == ಕರ್ನಾಟಕ ರಾಜ್ಯ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯು (ಕೊಂಡಿ) ಚಾರಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಬೆಂಗಳೂರಿಗೆ ಹತ್ತಿರದ ತಾಣವಾದ್ದರಿಂದ ಅತೀ ಹೆಚ್ಚು ಚಾರಣಪ್ರಿಯರ ನೆಚ್ಚಿನ ತಾಣವಾಗಿದೆ. === ಕಾಯ್ದಿರಿಸುವಿಕೆ === ಸ್ಕಂದಗಿರಿ ಹತ್ತುವ ಮೊದಲು ಆನ್ಲೈನ್ ಅಲ್ಲಿ ಶುಲ್ಕಪಾವತಿಸಿ ನಿಗದಿ ಮಾಡಬೇಕಾಗುತ್ತದೆ. ಬೆಳಿಗ್ಗೆ ೪ ಮತ್ತು ೮ ಗಂಟೆಗೆ ಆರಂಭವಾಗುವ ಚಾರಣಗಳು ತಲಾ ೧೫೦ ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರವಾಸೋದ್ಯಮ ಇಲಾಖೆಯ ಗೈಡ್‌ಗಳೂ ಸಹ ಲಭ್ಯವಿರುತ್ತಾರೆ. === ಸಮಯ === ಒಟ್ಟು ಅಂದಾಜು ೫ ಗಂಟೆಗಳ ಚಾರಣ (ಆರೋಹಣ - ೨ ತಾಸು, ವಿರಾಮ - ೧ ತಾಸು, ಅವರೋಹಣ - ೨ ತಾಸು) ಅತೀಸುಲಭವೂ ಅಲ್ಲದ ಅತೀ ಕಠಿಣವೂ ಅಲ್ಲದ ಚಾರಣಗಳ ಪಟ್ಟಿಗೆ ಸೇರಿದ್ದು ವರ್ಷದ ಎಲ್ಲ ಋತುಗಳಲ್ಲೂ ಕೈಗೊಳ್ಳಬಹುದಾಗಿದೆ. === ಚಾರಣ ಮಾರ್ಗ === ಕಳವಾರ ಗ್ರಾಮದ ಪಾಪಾಗ್ನಿ ಮಠದ ಹಿಂದಿನಿಂದ ಪ್ರಾರಂಭವಾಗುವ ಚಾರಣದ ಹಾದಿ 3 ಕಿ. ಮೀ. ಕ್ರಮಿಸಿದರೆ ಬೆಟ್ಟದ ತುದಿಯನ್ನು ತಲುಪುತ್ತದೆ. ಬೆಟ್ಟವು ಗಿರಿದುರ್ಗವಾಗಿದೆ (ಕೋಟೆಯಿಂದಾವೃತ್ತವಾದ ಬೆಟ್ಟ) ಸಮುದ್ರ ಮಟ್ಟದಿಂದ 1450 ಮೀ. ಎತ್ತರದಲ್ಲಿ ದೇವಾಲಯವೂ, ಕಲ್ಯಾಣಿಯೂ, ಕೆಲ ಕೋಟೆಯ ಉಳಿದ ಪಾರ್ಶ್ವಗಳೂ ಕಾಣಸಿಗುತ್ತವೆ. === ವಿಹಂಗಮ ನೋಟ === ಸೂರ್ಯೋದಯಕ್ಕೂ ಮುನ್ನ ಬೆಟ್ಟವನ್ನು ಹತ್ತಿ, ತುದಿಯಲ್ಲಿ ನಿಂತು ಸೂರ್ಯೋದಯವನ್ನು ವೀಕ್ಷಿಸಲು ಕಾದರೆ, ಮೋಡಗಳ ಮೇಲೆ ನಾವು ನಿಂತಿರುವಂತೆ ಭಾಸವಾಗುತ್ತದೆ ಹಾಗೂ ಮೋಡಗಳು ಸಾಗರ ಉಕ್ಕಿ ಹರಿಯುವ ರೀತಿ ತೇಲುತ್ತಿರುತ್ತವೆ. ಮೋಡಗಳ ಕೊನೆಯಲ್ಲಿ ಉದಯಿಸುವ ಸೂರ್ಯ ಸಾಗರದಿಂದ ಹೊರಬರುತ್ತಿರುವಂತೆ ಭಾಸವಾಗುತ್ತದೆ. ಚಿಕ್ಕಬಳ್ಳಾಪುರದ 'ಪಂಚಗಿರಿ'ಗಳೆಂದು ಹೆಸರಾಗಿರುವ ನಂದಿ , ಚನ್ನಗಿರಿ, ಬ್ರಹ್ಮಗಿರಿ ಮತ್ತು ಹೇಮಗಿರಿಗೊಳಂದಿಗೆ, ಸ್ಕಂದಗಿರಿಯೂ ಒಂದು. ಸ್ಕಂದಗಿರಿಯಿಂದ ನಂದಿಬೆಟ್ಟ ಸೇರಿದಂತೆ ಎಲ್ಲ ಪಂಚಗಿರಿಗಳಲನ್ನೂ ವೀಕ್ಷಿಸಬಹುದಾಗಿದೆ. == ಉಲ್ಲೇಖಗಳು ==